ಉದಯೋನ್ಮುಖ ಕಲಾವಿದ ಅನ್ವೇಷ್ ಆರ್.ಶೆಟ್ಟಿಯ ಅನನ್ಯ ಯಕ್ಷ ಸಾಧನೆಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಬಂಟ್ವಾಳ: ಈತನ ಹೆಸರು ಅನ್ವೇಷ್ ಆರ್. ಶೆಟ್ಟಿ. ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ. ವಿಶೇಷತೆ ಎಂದರೆ ಈತ ಕಲಿಕೆಯ ಜತೆಜತೆಯಲ್ಲೇ ಯಕ್ಷಗಾನದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಅಪೂರ್ವ ಪ್ರತಿಭೆ. ಈ ಬಾರಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಕೊಡಮಾಡುವ ” ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ”ಗೆ ಆಯ್ಕೆಯಾದ ಕಿರಿಯ ವಯಸ್ಸಿನ ಯಕ್ಷ ಸಾಧಕ ಎನ್ನುವುದು ಅನ್ವೇಷ್ ನ ಹೆಗ್ಗಳಿಕೆ.


ಎಳವೆಯಿಂದಲೇ ಅನ್ವೇಶ್ ಆರ್.ಶೆಟ್ಟಿಗೆ ಯಕ್ಷಗಾನವೆಂದರೆ ವಿಶೇಷ ಒಲವು. ತನ್ನ ವಿಶೇಷವಾದ ಆಸಕ್ತಿ, ಅಧ್ಯಯನ, ಅಭ್ಯಾಸ ಮತ್ತು ಸತತ ಪರಿಶ್ರಮದಿಂದ ಮೇಲೇರಿ ಬಂದವನು. ಶಿಕ್ಷಣದ ಒತ್ತಡದ ನಡುವೆಯೂ ಯಕ್ಷಗಾನದಲ್ಲಿ ಇದೀಗ ಇಂಜಿನಿಯರಿಂಗ್ ವಿದ್ಯಾಭ್ಯಾಸದವರೆಗೂ ಹೊಸ ಹೊಸ ಪ್ರಯೋಗ, ಪ್ರದರ್ಶನಗಳನ್ನು ಮಾಡುತ್ತಾ ಎಲ್ಲಡೆಯಲ್ಲೂ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾದವನು.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ರಂಗ ಕಲಾವಿದ, ನಿರ್ದೇಶಕ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ ಅನ್ವೇಷ್ ಎಳೆಯ ವಯಸ್ಸಿನಲ್ಲೇ ಎಲ್ಲೆಲ್ಲೋ ತಿರುಗಿ ಯಕ್ಷಗಾನದ ಕುಣಿತ ಅಭ್ಯಸಿಸಿ ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆ ತೋರ್ಪಡಿಸಿದ್ದರು. ತನ್ನ ಏಳನೇ ವರ್ಷದಲ್ಲಿ ಬಣ್ಣ ಹಚ್ಚಿದ ಇವರು ಬಾಲಕಲಾವಿದನಾಗಿ ಬಳಿಕ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸುವ ಅವಕಾಶ ಪಡೆದಿದ್ದರು. ಪ್ರಸ್ತುತ ಇಪ್ಪತ್ತೊಂದು ವರ್ಷಕ್ಕೆ ಕಾಲಿರಿಸಿದ ಇವರು ನೂರಾರು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಕಲಾ ಕುಟುಂಬದ ಪರಂಪರೆ:

ಕಲಾ ಕುಟುಂಬದ ಕುಡಿಯಾಗಿರುವ ಅನ್ವೇಷ್‌ಗೆ ಕಲೆಯ ನಂಟು ಸಹಜವಾಗಿಯೇ ಅಂಟಿಕೊಂಡಿದೆ. ಚಿತ್ರಬ್ರಹ್ಮನೆಂದೇ ಖ್ಯಾತಿಗಳಿಸಿದ ಮೇರು ಕಲಾವಿದ ಮುತ್ತಾತ ವಿಟ್ಲ ಬಾಬು ಮಾಸ್ಟರ್ ಅವರ ಸೀನು ಸೀನರಿಯ ಯಕ್ಷಗಾನ ಪ್ರಖ್ಯಾತಿ ಪಡೆದಿದೆ. ಅರುವತ್ತು ವರ್ಷಗಳ ಬಳಿಕ ಮಂಗಳೂರಿನಲ್ಲಿ ಮತ್ತೆ ಸೀನು ಸೀನರಿಯ ಯಕ್ಷಗಾನ ಆರಂಭವಾದಾಗ ಅದರಲ್ಲಿ ಪಾತ್ರ ನಿರ್ವಹಿಸಲು ಅವಕಾಶ ದೊರಕಿದ್ದು ಯೋಗಾಯೋಗಾವೇ ಸರಿ.
ಅಜ್ಜ ದಿ.ಲಕ್ಷ್ಮಣ ಮಾಸ್ಟರ್ ಹೆಸರಾಂತ ಚಿತ್ರಕಲಾ ಅಧ್ಯಾಪಕರು. ಗೀಚಿದ ರೇಖೆಗಳೇ ಚಿತ್ರವಾಗಿಸುವ ಕಲಾನೈಪುಣ್ಯದ ಖ್ಯಾತರು. ನಾಟಕ, ಸಂಗೀತದ ನಿಪುಣರು. ತಂದೆ ರತ್ನದೇವ್ ಶೆಟ್ಟಿ ಕಲೆ, ಸಾಹಿತ್ಯ, ಸಾಂಸ್ಕ್ರತಿಕ ರಂಗದಲ್ಲಿ ಸಕ್ರೀಯರು. ಅನ್ವೇಷ್‌ರಿಗೆ ಯಕ್ಷಗಾನ ಬಣ್ಣಗಾರಿಕೆ ಕರತಲಾಮಲಕವಾಗಿದೆ. ಅದರಲ್ಲೂ ಹಸಿ ಬಣ್ಣ ಬರೆಯುವ ಕಲೆ ಇವರಿಗೆ ಸಿದ್ಧಿಸಿದೆ. ಸ್ವತ: ಮುಖವರ್ಣಿಕೆ ನಡೆಸುವುದರ ಜತೆ ಪ್ರಸಾಧನ ಕಲಾವಿದನಾಗಿಯೂ ಪರಿಣತಿ ಪಡೆದಿದ್ದಾರೆ.

ಅನ್ವೇಷನ ಯಕ್ಷ ಪಯಣ.:

ಪ್ರಾಥಮಿಕ ಹಂತದಲ್ಲಿ ಗೋಪಾಲ ಅಂಚನ್ ಅವರ ಯಕ್ಷಲೋಕದ ಮೂಲಕ ಶ್ರೀ ಯೋಗೀಶ್ ಆಚಾರ್ಯ ಅಳದಂಗಡಿ ಅವರಲ್ಲಿ ಆರಂಭಿಕ ಹೆಜ್ಜೆಗಾರಿಕೆ ಕಲಿತು, ಬಳಿಕ ಬಂಟ್ವಾಳದ ಆರಾಧನಾ ಫ್ರೆಂಡ್ಸ್ ಸರ್ಕಲ್ ನಲ್ಲಿ ಕಟೀಲಿನ ಶ್ರೀ ಶ್ರೀವತ್ಸ ಅವರಲ್ಲಿ ನಾಟ್ಯ ಕಲಿತರು. ನಂತರ ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಮಂಡಳಿಯಲ್ಲಿ ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ ಹಾಗೂ ಕಟೀಲು ಮೇಳದ ಕಲಾವಿದ ಶ್ರೀ ಪ್ರೇಮ್‌ರಾಜ್ ಕೊಯಿಲ ಅವರಿಂದ ನಾಟ್ಯ ತರಬೇತಿ ಪಡೆದರು. ಪ್ರಸ್ತುತ ಹನುಮಗಿರಿ ಮೇಳದ ಕಲಾವಿದ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯನಾಗಿ ನಾಟ್ಯ, ಅಭಿನಯ, ಮಾತುಗಾರಿಕೆಯನ್ನು ಕಲಿಯುತ್ತಿದ್ದಾರೆ. ಪ್ರೌಢಶಾಲಾ ಹಂತದಲ್ಲೇ ಗುರುಗಳ ಮಾರ್ಗದರ್ಶನದಲ್ಲಿ ಕಟೀಲು ಮೇಳದಲ್ಲಿ ಪಾತ್ರ ನಿರ್ವಹಿಸುವ ಅವಕಾಶ ಪಡೆದ ಅನ್ವೇಷ್‌ ಹನುಮಗಿರಿ ಮೇಳ ಸಹಿತ ವಿವಿಧ ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹವ್ಯಾಸಿ ಕಲಾವಿದನಾಗಿ ಭಾಗವಹಿಸಿ ಯಕ್ಷಲೋಕದಲ್ಲಿ ಮಿಂಚುತ್ತಿದ್ದಾರೆ. ಬಾಲಕಲಾವಿದನಾಗಿ ಬಣ್ಣ ಹಚ್ಚಿದ ಇವರು ಪುಂಡು ವೇಷ, ಸ್ತ್ರೀ ವೇಷ, ರಾಜ ವೇಷ, ಕಿರೀಟ ವೇಷಗಳಲ್ಲದೆ ಬಣ್ಣದ ವೇಷ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ಪ್ರಸ್ತುತ ನಿಟ್ಟೆ ಡಾ.ಎನ್.ಎಸ್.ಎ.ಎಂ.ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಯಾಗಿರುವ ಇವರು ಈಗಾಗಲೆ ತನ್ನ ಪ್ರತಿಭೆಯಿಂದ ಐಟಿ ಕಂಪೆನಿಯಲ್ಲಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ. ಶಿಕ್ಷಣದ ಜತೆ ಯಕ್ಷಗಾನ, ಚಿತ್ರಕಲೆ, ತುಳು ಭಾಷೆ, ಸಂಸ್ಕೃತಿ, ಭೂತಾರಾಧನೆ ಅಧ್ಯಯನ, ಛಾಯಾಗ್ರಹಣದ ಬಗ್ಗೆ ಆಸಕ್ತಿ ಹೊಂದಿ ಕಾಲೇಜಿನಲ್ಲಿ ತುಳುಕೂಟದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಂಚಾಲಕತ್ವದಲ್ಲಿ ಕಾಲೇಜಿನಲ್ಲಿ ಅಂತರಕಾಲೇಜು ಯಕ್ಷಗಾನ ಸ್ಪರ್ಧೆ ಸಂಘಟಿಸಿ ಯಶಸ್ವಿಯಾಗಿದ್ದಾರೆ.
ಯಕ್ಷಗಾನ ನಾಟ್ಯದ ಜತೆ ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಮತ್ತು ಶ್ರೀ ಚಂದ್ರಶೇಖರ ಕೊಂಕುಣಾಜೆ ಅವರಲ್ಲಿ ಹಿಮ್ಮೇಳದ ಚಕ್ರತಾಳ, ಮದ್ದಳೆ, ಚೆಂಡೆ ವಾದನ ಅಭ್ಯಾಸ ನಡೆಸಿ ಯಕ್ಷಗಾನದ ಬಹುಮುಖಿ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ಸರಮಾಲೆ:

ಪ್ರಾಥಮಿಕ, ಪ್ರೌಢ ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಲಯ, ತಾಲೂಕು ಮಟ್ಟದಲ್ಲಿ ಪ್ರಶಸ್ತಿ, ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿ ಅಂತರಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಆರು ಬಾರಿ ವೈಯಕ್ತಿಕ ಉತ್ತಮ ಕಿರೀಟ ವೇಷ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ನಡೆಸಿದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಉತ್ತಮ ರಾಜವೇಷ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ಶ್ರೀಮತಿ ವಿದ್ಯಾ ಕೊಳ್ಯೂರು ಅವರ ಯಕ್ಷ ಮಂಜೂಷ ತಂಡದಲ್ಲಿ ಹಿಂದಿ ಭಾಷೆಯ ಯಕ್ಷಗಾನದಲ್ಲಿ ಪಂಚವಟಿ ಪ್ರಸಂಗದಲ್ಲಿ ಶ್ರೀರಾಮನ ಪಾತ್ರದ ಯಶಸ್ವಿ ನಿರ್ವಹಣೆ ಇವರ ಹೆಗ್ಗಳಿಕೆ.
ಬಣ್ಣದ ವೇಷಗಳಾದ ಯಮ, ರಾವಣ, ವರಾಹ, ಶೂರ್ಪನಖಿ, ಕರಾಳ ನೇತ್ರೆ, ಧೂಮ್ರಾಕ್ಷ, ಹನುಮಂತ ಮೊದಲಾದ ಪಾತ್ರಗಳಿಗೆ ಸ್ವಂತ ಮುಖವರ್ಣಿಕೆ, ಪ್ರಸಾಧನ ಕಲಾವಿದನಾಗಿ ಶ್ರೀ ಭಗವತೀ ಯಕ್ಷಕಲಾ ಬಳಗ ಉಡುಪಿ, ಪುತ್ತೂರು ಸಂಸ್ಥೆ ಹಾಗೂ ಮೋಹಿನಿ ಕಲಾಸಂಪದ ಕಿನ್ನಿಗೋಳಿ ಇದರಲ್ಲಿ ಸಕ್ರಿಯ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯಕ್ಷಶಿಕ್ಷಣ ಯೋಜನೆಯಲ್ಲಿ ದಿ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢ ಶಾಲೆ ಶಂಭೂರು ಹಾಗೂ ಶ್ರೀ ರಾಮ ಪ್ರೌಢ ಶಾಲೆ ಫರಂಗಿಪೇಟೆ ಇದರಲ್ಲಿ ಯಕ್ಷ ಗುರುವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನಾಭ್ಯಾಸ ಮಾಡುತ್ತಿದ್ದಾರೆ.

ರಂಗದಲ್ಲಿ ಅನ್ವೇಷ್:

ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ವಾಮದಪದವು, ವಾಮದಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪುಂಜಾಲಕಟ್ಟೆ ಶ್ರೀ ಶಾರದಾಂಬಾ ಯುವಕ ಮಂಡಲ, ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಮಂಡಳಿ,
ಯಕ್ಷಕೂಟ ಮಧ್ವ, (ಹಿಮ್ಮೇಳ, ಮುಮ್ಮೇಳ), ಯಕ್ಷಾವಾಸ್ಯಂ ಕಾರಿಂಜ, ಯಕ್ಷ ಮಿತ್ರರು ಪಂಜಿನಡ್ಕ ಕಿನ್ನಿಗೋಳಿ, ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರ ಆರೂ ಮೇಳಗಳಲ್ಲಿ ಅನ್ವೇಷ್ ಅಭಿನಯದೊಂದಿಗೆ ರಂಗದಲ್ಲಿ ಮೆರೆದಿದ್ದಾರೆ.
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಯಕ್ಷಗಾನ ಸಮಿತಿ ಕಡ್ತಾಲಬೆಟ್ಟು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಯಕ್ಷಗಾನ ಸಮಿತಿ ಬಂಟ್ವಾಳ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಮಿತಿ, ಸಾಯಿ ಶಕ್ತಿ ಕಲಾ ಬಳಗ ಚಿಲಿಂಬಿ ಇದರ ಸೀನು ಸೀನರಿ ಯಕ್ಷಗಾನ, ಯಕ್ಷ ಮಂಜೂಷ ಮಂಗಳೂರು, ಶ್ರೀ ಭಗವತೀ ಯಕ್ಷಕಲಾ ಬಳಗ ಉಡುಪಿ, ಪುತ್ತೂರು ಮಯೂರ ಪ್ರತಿಷ್ಠಾನ ಪಡ್ರೆಯ ಯಕ್ಷಗಾನಗಳಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದವರು.
ಯಕ್ಷಗಾನದ ಅಭಿರುಚಿಯೊಂದಿಗೆ ಆ ಮೂಲಕ ತನ್ನ ಆದಾಯವನ್ನು ಕಂಡುಕೊಂಡು ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆಯುತ್ತಿರುವ ಅನ್ವೇಷ್ ಇತರರಿಗೆ ಮಾದರಿ.

ಅನ್ವೇಷ್ ಅವರ ಅನನ್ಯ ಸಾಧನೆಗೆ ಅರ್ಹವಾಗಿಯೇ ಪ್ರಶಸ್ತಿ ಒಲಿದು ಬಂದಿದ್ದು ಇವರ ಭವಿಷ್ಯ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಕಲಾಮಾತೆಯ ಅನುಗ್ರಹ ಸದಾ ಇರಲಿ ಎಂಬುದೇ ನಮ್ಮೆಲ್ಲರ ಹರಕೆ- ಹಾರೈಕೆ.