ಕಟ್ಟೆಮಾರ್: ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಫೆ.26ರಿಂದ ಮಾ.1ರವರೆಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಫೆ.,26 ರಿಂದ ಮಾ.1 ರವರೆಗೆ ಶ್ರೀ ಮಂತ್ರದೇವತಾ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವ ನಡೆಯಲಿದೆ.


ಭಾನುವಾರ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾನಿಧ್ಯದ ಮುಖ್ಯಸ್ಥರಾದ, ಮಂತ್ರದೇವತಾ ಆರಾಧಕ ಮನೋಜ್ ಕುಮಾರ್ ಕಟ್ಟೆಮಾರು ಉತ್ಸವದ ಬಗ್ಗೆ ವಿವರ ನೀಡಿದರು.


ಫೆ.26 ರಂದು ಸಂಜೆ 6 ಗಂಟೆಗೆ ಕಲ್ಲಡ್ಕ ಶ್ರೀರಾಮ ಮಂದಿರದಿಂದ ಶ್ರೀ ಮಂತ್ರದೇವತೆಯ ಶಿಲಾಮಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದ್ದು ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸುವರು.
ಫೆ.27 ರಂದು ಸಂಜೆ 6 ಗಂಟೆಗೆ ನಾಗದೇವರ ಪ್ರೀತ್ಯರ್ಥ ಅಶ್ಲೇಷ ಬಲಿ ತನು ತರ್ಪಣ ಸೇವೆ, ರಾತ್ರಿ ವೈದಿಕ ಕಾರ್ಯಕ್ರಮಗಳು, ಫೆ. 28ರಂದು ಬೆಳಿಗ್ಗೆ 8.04 ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಮಂತ್ರದೇವತಾ ಪುನರ್ ಪ್ರತಿಷ್ಠಾ, ಕಲಶಾಭಿಷೇಕ, ಪರ್ವಾರಾಧನೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಮನೋಜ್ ಕುಮಾರ್ ತಿಳಿಸಿದರು.
ಫೆ.29ರಂದು ಬೆಳಿಗ್ಗೆ 6 ರಿಂದ ಸಂಜೆ 5 ರತನಕ ವಿವಿಧ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಸೇವೆ, ಸಂಜೆ ಧಾರ್ಮಿಕ ಸಭೆ, ರಾತ್ರಿ ಯಕ್ಷ- ಗಾನ- ಹಾಸ್ಯ ವೈಭವ, ಶ್ರೀ ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ದೊಂದಿ ಬೆಳಕಿನಲ್ಲಿ ಕೋಲೋತ್ಸವ ನಡೆಯಲಿದೆ.ಮಾ.1 ರಂದು ರಾತ್ರಿ ಶ್ರೀ ಕೊರಗಜ್ಜ ದೈವದ ನರ್ತನ ಸೇವೆ ನಡೆಯಲಿದೆ ಎಂದು ಮನೋಜ್ ಕುಮಾರ್ ಕಟ್ಟೆಮಾರ್ ತಿಳಿಸಿದರು.


ಈ ಸಾನಿಧ್ಯದಲ್ಲಿ ಶ್ರೀ ಮಂತ್ರದೇವತೆಯನ್ನು ಮನೋಜ್ ಕುಮಾರ್ ಅವರು ಆರಾಧಿಸಿಕೊಂಡು ಬರುತ್ತಿದ್ದು ದೂರದೂರಿಂದಲೂ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ತಮ್ಮ ಇಷ್ಠಾರ್ಥವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇದೀಗ ಮಂತ್ರದೇವತೆಗೆ ನೂತನ ಸಾನಿಧ್ಯ ನಿರ್ಮಿಸಲಾಗಿದ್ದು ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಆರ್.ಚೆನ್ನಪ್ಪ ಕೋಟ್ಯಾನ್ ಹೇಳಿದರು.


ಪ್ರಮುಖರಾದ ದಿನೇಶ್ ಅಮ್ಟೂರು, ಜಗದೀಶ್, ಕುಶಾಲಪ್ಪ ಅಮ್ಟೂರು, ಪ್ರಭಾಕರ ಶೆಟ್ಟಿ, ಕಿಶೋರ್ ಕುಮಾರ್ ಕಟ್ಟೆಮಾರು ಸುದ್ದಿಗೋಷ್ಠಿಯಲ್ಲಿದ್ದರು.

ವರದಿ: ಗೋಪಾಲ ಅಂಚನ್