ದುಡಿಯುವ ಜನರ ಶತ್ರು, ಜನವಿರೋಧಿ ಬಿಜೆಪಿ ಸೋಲಿಸುವುದು ಕಾರ್ಮಿಕ ವರ್ಗದ ಆದ್ಯತೆ: ಸಿಪಿಐ(ಎಂ)

ಬಂಟ್ವಾಳ: ಭ್ರಷ್ಟ, ಕೋಮುವಾದಿ ಬಿಜೆಪಿ ಆಡಳಿತದಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಬೆಲೆಯೇರಿಕೆ, ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಜನರ ಬದುಕಿನ ಮೇಲೆ ಗದಾಪ್ರಹಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕ ವರ್ಗದ ಆದ್ಯತೆಯಾಗಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.


ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತ, ಕಾರ್ಮಿಕ ವರ್ಗದ ಚಳವಳಿಗಳ ಕೇಂದ್ರವಾಗಿದ್ದ ಬಂಟ್ವಾಳವನ್ನು ಬಿಜೆಪಿ ಇಂದು ದ್ವೇಷರಾಜಕಾರಣದ ಪ್ರಯೋಗ ಶಾಲೆಯಾಗಿ ಪರಿವರ್ತಿಸಿದೆ. ಜನರ ಬದುಕಿನ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸಿ ಮತಾಂಧತೆಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಸೋಲಿಸಲು ಬಂಟ್ವಾಳದಲ್ಲಿ ಸಿಪಿಐಎಂ ಶ್ರಮಿಸಲಿದೆ ಎಂದರು.


ಬಂಟ್ವಾಳ ಸಹಿತ ದಕ್ಷಿಣಕನ್ನಡ ಜಿಲ್ಲೆ ಬಿಜೆಪಿಯ ಆಡಳಿತದ ಅಡಿಯಲ್ಲಿ ಎಲ್ಲಾ ರಂಗದಲ್ಲಿಯೂ ಹಿನ್ನಡೆ ಅನುಭವಿಸಿದೆ. ಜಿಲ್ಲೆಯಲ್ಲಿ ತಲೆಯೆತ್ತಿರುವ ಬೃಹತ್ ಉದ್ಯಮಗಳಲ್ಲಿ ಜಿಲ್ಲೆಯ ಯುವಜನತೆಗೆ ಉದ್ಯೋಗ ಒದಗಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ಯುವಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಬಿಜೆಪಿ ಮತ್ತವರ ಸಂಘಟನೆಗಳು ಯುವಜನರ ಬದುಕಿನಲ್ಲಿ ಚೆಲ್ಲಾಟ ನಡೆಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.


ಬಂಟ್ವಾಳ ಕ್ಷೇತ್ರವು ಇಂದು ಆರೋಗ್ಯ, ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ವಿಭಜನೆಯ ರಾಜಕಾರಣದ ಪ್ರಯೋಗ ಶಾಲೆಯಾಗಿರುವ ಬಂಟ್ವಾಳದಲ್ಲಿ ಬಿಜೆಪಿಯನ್ನು ಸೋಲಿಸಿ, ಜಾತ್ಯಾತೀತ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಪಿಐಎಂ ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಬಂಟ್ವಾಳದ ಜನತೆ ಕೋಮುವಾದಿ, ಜನವಿರೋಧಿ ಬಿಜೆಪಿಯನ್ನು ಸೋಲಿಸುವ ಮೂಲಕ ಬಂಟ್ವಾಳದಲ್ಲಿ ಜನಪರವಾದ ರಾಜಕಾರಣಕ್ಕೆ ಅವಕಾಶ ಒದಗಿಸಬೇಕು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದರು.


ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸದಸ್ಯರಾದ ಉದಯ ಕುಮಾರ್, ಲೋಲಾಕ್ಷಿ ಸುದ್ದಿಗೋಷ್ಠಿಯಲ್ಲಿದ್ದರು.