ಮಾಣಿಯಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.28 ಮತ್ತು 29ರಂದು

ವಿಟ್ಲ : ಬಂಟ್ವಾಳ ತಾಲೂಕು 20ನೇ ಕನ್ನಡ  ಸಾಹಿತ್ಯ ಸಮ್ಮೇಳನ ಡಿ.28 ಮತ್ತು 29ರಂದು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಡ್ತಿಲ ಪ್ರಹ್ಲಾದ ಶೆಟ್ಟಿ ತಿಳಿಸಿದರು. 

ಮಾಣಿ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಣಿ ಸುತ್ತಮುತ್ತಲಿನ 11 ಗ್ರಾಮದ ನಾಗರೀಕರ ಆಶ್ರಯದಲ್ಲಿ ಅರ್ಬಿ ಶ್ರೀನಿವಾಸ ಶೆಟ್ಟಿ ಸಭಾಂಗಣದ ಉರ್ದಿಲಗುತ್ತು ಇಂದುಹಾಸ ರೈ ವೇದಿಕೆಯಲ್ಲಿ ಎರಡು ದಿನ ನಡೆಯುವ ಸಮ್ಮೇಳನದ ಅಧ್ಯಕ್ಷತೆಯನ್ನು ಲೇಖಕಿ, ಐಪಿಎಸ್ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ವಹಿಸಿಕೊಳ್ಳಲಿದ್ದಾರೆ ಎಂದರು.

P
ಡಿ. 27 ಶನಿವಾರ ಬೆಳಗ್ಗೆ 10ಕ್ಕೆ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಮಾಣಿ ರಾಜಕಮಲ್ ಆಡಿಟೋರಿಯಂನಿಂದ ಸಮ್ಮೇಳನ ಸಭಾಂಗಣವರೆಗೆ ಮಧ್ಯಾಹ್ನ 3ಕ್ಕೆ ಭುವನೇಶ್ವರಿ ಮೆರವಣಿಗೆ ನಡೆಯಲಿದ್ದು, ಮಾಣಿ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಪುಷ್ಪಾರ್ಚನೆ ನೆರವೇರಿಸಿದರೆ, ಮೆರವಣಿಗೆಯನ್ನು ಸೂರಿಕುಮೇರು ಸಂತ ಜೋಸೆಫರ ದೇವಾಲಯ ಧರ್ಮಗುರು ವಂ.ಗ್ರೆಗರಿ ಪಿರೇರಾ ಉದ್ಘಾಟಿಸುವರು. ವಸ್ತುಪ್ರದರ್ಶನವನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುಸ್ತಕ ಪ್ರದರ್ಶನವನ್ನು ನಂದಾವರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸುವರು.


ಶನಿವಾರ ಸಂಜೆ
4.35ಕ್ಕೆ ನಡೆಯುವ
ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ವಾಂಸ ಡಾ. ಪ್ರಭಾಕರ ಶಿಶಿಲ ಉದ್ಘಾಟಿಸುವರು .
ಹೊಸ ಕೃತಿಗಳನ್ನು ಶಾಸಕ ರಾಜೇಶ್ ನಾಯ್ಕ್ ಬಿಡುಗಡೆಗೊಳಿಸಲಿದ್ದು, ಅಂದು ಸಂಜೆ ಕೃಷಿ ಸಂಸ್ಕೃತಿ, ಅಡಕೆ ಕೃಷಿ ಸವಾಲು, ಪರಿಹಾರ ಗೋಷ್ಠಿ, ಮೌನೇಶ ವಿಶ್ವಕರ್ಮ ನಿರ್ದೇಶನದ ನಮ್ಮ ಬಾಪು ನಾಟಕ, ಕೆ.ವಿ.ರಮಣ್ ನಿರ್ದೇಶನದ ನಾಟ್ಯಾಯನ ನಡೆಯಲಿದೆ ಎಂದವರು ವಿವರಿಸಿದರು.

ಡಿ. 29 ಭಾನುವಾರ ಉದಯೋನ್ಮುಖ ಸಾಹಿತ್ಯ ಕುರಿತ ಗೋಷ್ಠಿ, ಜನಪದ ಸಂಸ್ಕೃತಿ, ಯಕ್ಷಗಾನ ಕುರಿತ ಗೋಷ್ಠಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ನರಕಾಸುರ ಮೋಕ್ಷ, ಸಾಹಿತ್ಯ ಪ್ರಸ್ತುತಿ, ಯಕ್ಷಗಾನ ಭಾಗವತಿಕೆ ಅನನ್ಯತೆ ಕುರಿತ ಗೋಷ್ಠಿ, ವಿದ್ಯಾ ಮನೋಜ್ ತಂಡದಿಂದ ಭರತನಾಟ್ಯ, ಮರೆಯಲಾಗದ ಮಹಾನುಭಾವರು ನುಡಿನಮನ, ಸಾಧಕರಿಗೆ ಸನ್ಮಾನ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಪರಿಚಯ ನಡೆಯಲಿದ್ದು, ಬಳಿಕ ಸಮಾರೋಪ ನಡೆಯಲಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದು, ಸಮಾರೋಪ ಭಾಷಣವನ್ನು ಮಂಗಳೂರು ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ ಪ್ರಿನ್ಸಿಪಾಲ್ ಪ್ರೊ.ಬಾಲಕೃಷ್ಣ ಶೆಟ್ಟಿ ಮಾಡಲಿದ್ದಾರೆ , ಸಮ್ಮೇಳನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು ಎಲ್ಲರಿಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕ.ಸಾ.ಪ. ಅದ್ಯಕ್ಷ ಮೋಹನ್ ರಾವ್, ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷೆ, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಸಂಚಾಲಕರಾದ ಗಂಗಾಧರ ಆಳ್ವ ಅನಂತಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಿ,ಕೆ, ಜತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ಆಳ್ವ ಕೊಡಾಜೆ, ವಿಜಯಲಕ್ಷ್ಮೀ ವಿ. ಶೆಟ್ಟಿ, ಕೋಶಾಧಿಕಾರಿ ಬಿ.ಜಗನ್ನಾಥ ಚೌಟ ಬದಿಗುಡ್ಡೆ, ತಾ.ಪಂ ಸದಸ್ಯೆ ಮಂಜುಳಾ ಕುಶಲ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ವಿವಿಧ ಸಮಿತಿಗಳ ಪ್ರಮುಖರಾದ ಗಂಗಾಧರ ರೈ, ದಿನಕರ ಪೂಜಾರಿ, ಸಚಿನ್ ರೈ ಮಾಣಿಗುತ್ತು, ಇಬ್ರಾಹಿಂ ಕೆ. ಮಾಣಿ, ಮೌನೇಶ ವಿಶ್ವಕರ್ಮ, ಲತೀಫ್ ನೇರಳಕಟ್ಟೆ, ಉದಯಕುಮಾರ್ ರೈ, ನರಸಿಂಹ ಮಾಣಿ, ಮಹೇಶ್ ಮಾಣಿ, ಕೃಷ್ಣ ಶರ್ಮಾ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.