ಬಿ.ರಮಾನಾಥ ರೈ ಅವರು ದೇಶಕ್ಕೆ ಅಗತ್ಯವಿರುವ ವ್ಯಕ್ತಿ. ಅವರನ್ನು ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಿ-ಬಿ.ಜನಾರ್ಧನ ಪೂಜಾರಿ

ಬಂಟ್ವಾಳ: ಬಿ.ರಮಾನಾಥ ರೈ ಅವರು ದೇಶಕ್ಕೆ ಅಗತ್ಯವಿರುವ ವ್ಯಕ್ತಿ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಬಂಟ್ವಾಳದ ಅವರ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಕಾಂಗ್ರೇಸ್ ಪಕ್ಷದ ಬೆಳವಣಿಗೆಯಲ್ಲಿ ರಮಾನಾಥ ರೈಯವರ ಕೊಡುಗೆ ಅಪಾರವಾದುದು. ಅವರ ಶ್ರಮ ಮತ್ತು ಸಾಧನೆಗೆ ಬೆಲೆ ಇದೆ ಎಂಬುದನ್ನು ಮತದಾರರು ತೋರಿಸಿಕೊಡಬೇಕು ಎಂದರು.

ಕಳೆದ ಐವತ್ತು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಾಗಿ ಹಗಲಿರುಳು ಪಕ್ಷಕ್ಕಾಗಿ ದುಡಿದಿದ್ದೇನೆ. ಈಗಲೂ ಬಿ.ರಮಾನಾಥ ರೈಯವರ ಪರ ಪ್ರಚಾರಕ್ಕೆ ಬರಲು ಉತ್ಸುಕನಾಗಿದ್ದೇನೆ. ಆದರೆ ಈಗ ವಯೋಸಹಜ ಸಮಸ್ಯೆಗಳಿರುವುದರಿಂದ ಮನೆ ಮನೆಗೆ ಬರಲು ಅಸಾಧ್ಯವಾಗಿದೆ. ಅದ್ದರಿಂದ ಈಗ ಮಾಧ್ಯಮದ ಮೂಲಕ ಬಿ.ರಮಾನಾಥ ರೈ ಅವರ ಪರವಾಗಿ ಮತಯಾಚಿಸುತ್ತಿದ್ದೇನೆ ಎಂದು ಬಿ.ಜನಾರ್ಧನ ಪೂಜಾರಿ ಹೇಳಿದರು.

ರೈಯವರು ಹಲವಾರು ವರ್ಷಗಳಿಂದ ಕ್ಷೇತ್ರದ ಜನತೆಯ ಸೇವೆ ಮಾಡಿದವರು. ಕ್ಷೇತ್ರದ ಮತದಾರರಾದ ನೀವು ಅವರಿಗೆ ಬೆಂಬಲ ನೀಡಿದ್ದೀರಿ. ಅವರು ನಿಮ್ಮನ್ನು ಯಾವತ್ತೂ ಮರೆಯಲಿಲ್ಲ. ನಿರಂತರ ನಿಮ್ಮ ಸೇವೆ ಮಾಡಿದ್ದಾರೆ. ಈ ಬಾರಿಯೂ ನೀವು ಅವರನ್ನು ಮರೆಯಬಾರದು. ಅವರ ಶ್ರಮಕ್ಕೆ ಬೆಲೆ ಇದೆ ಅಂತ ತೋರಿಸಿಕೊಡಬೇಕು. ರೈಯವರಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಜನಾರ್ಧನ ಪೂಜಾರಿ ಮತದಾರರಲ್ಲಿ ಮನವಿ ಮಾಡಿದರು.

ರೈಯವರಿಗೆ ಸುಳ್ಳು ಹೇಳಲು, ಮೋಸ ಮಾಡಲು ಗೊತ್ತಿಲ್ಲ:

ರೈಯವರು ಪ್ರಾಮಾಣಿಕವಾಗಿ ಜನಸೇವೆ ಮಾಡಿದವರು. ಅವರ ಸಾಧನೆ ಕಡಿಮೆ ಇಲ್ಲ. ಆದರೆ ಅವರಿಗೆ ಸುಳ್ಳು ಹೇಳಲು ಗೊತ್ತಿಲ್ಲ, ಮೋಸ ಮಾಡಲು ಗೊತ್ತಿಲ್ಲ. ಅವರು ಸತ್ಯದ ಹಾದಿಯಲ್ಲಿ ನಡೆದವರು. ಅವರು ಖಂಡಿತ ಗೆಲುವು ಸಾಧಿಸುತ್ತಾರೆ ಎಂದು ರೈಯವರನ್ನು ಆಶೀರ್ವದಿಸಿದ ಪೂಜಾರಿಯವರು
ರೈಯವರು ಮತ್ತೆ ಗೆಲ್ಲಬೇಕು. ಆ ಮೂಲಕ ಜನತೆಗೆ ಮತ್ತು ಪಕ್ಷಕ್ಕೆ ಅವರ ಸೇವೆ ಸಿಗಬೇಕು. ಅವರಂತಹ ವ್ಯಕ್ತಿ ದೇಶಕ್ಕೆ ಅಗತ್ಯವಿದೆ ಎಂದರು.

ಮಾಜಿ ಸಚಿವ, ಬಂಟ್ವಾಳ ಕಾಂಗ್ರೇಸ್ ಅಭ್ಯರ್ಥಿ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ಧಕಟ್ಟೆ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ವಾಸು‌ ಪೂಜಾರಿ ಲೊರೆಟ್ಟೊ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.