ಅಪಪ್ರಚಾರದಿಂದ ನನ್ನನ್ನು ಸೋಲಿಸಿರಬಹುದು, ಆದರೆ ಅಭಿವೃದ್ಧಿಯಲ್ಲಿ ನನಗೆ ಸವಾಲು ಹಾಕುವವರು ಯಾರೂ ಇಲ್ಲ-ಬಿ.ರಮಾನಾಥ ರೈ

ಬಂಟ್ವಾಳ: ಅಪಪ್ರಚಾರದಿಂದ ನನ್ನನ್ನು ಸೋಲಿಸಿರಬಹುದು. ಆದರೆ ಅಭಿವೃದ್ಧಿಯಲ್ಲಿ ನನಗೆ ಸವಾಲು ಹಾಕುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಏಮಾಜೆ ಹಾಗೂ ನೇರಳಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು
ನನ್ನ ಶಾಸಕ, ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರಕ್ಕೆ ೫,೦೦೦ ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದಾದ್ಯಂತ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಾಗಿದೆ. ಆದರೆ ಕಳೆದ ಬಾರಿ ಅಪಪ್ರಚಾರದಲ್ಲಿ ನನ್ನನ್ನು ಸೋಲಿಸಲಾಗಿದೆ ಎಂದರು.

ಬಂಟ್ವಾಳದಲ್ಲಿ ಏನಾದರೂ ಸರಕಾರಿ ಯೋಜನೆಗಳು ಕಾರ್ಯಗತವಾಗಿದ್ದರೆ ಅದು ನನ್ನ ಅವಧಿಯಲ್ಲಿ ಜಾರಿಯಾಗಿರುವಂತದ್ದು. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಾಗಿದ್ದರೂ, ಅಪಪ್ರಚಾರದಿಂದ ನನ್ನನ್ನು ಸೋಲಿಸಲಾಗಿದೆ. ಬಿಜೆಪಿಯು ಮತ್ತೆ ಸುಳ್ಳು, ಅಪಪ್ರಚಾರ ನಡೆಸುತ್ತಿದ್ದು ಮತದಾರರು ಜಾಗೃತರಾಗಿ ಬಿಜೆಪಿಯ ಕುತಂತ್ರಕ್ಕೆ ತಕ್ಕ ಬುದ್ದಿ ಕಲಿಸಬೇಕು ಎಂದು ರಮಾನಾಥ ರೈ ಹೇಳಿದರು.

ಬಿಜೆಪಿಯ ಡಬ್ಬಲ್ ಎಂಜಿನ್ ಸರಕಾರದ ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗ, ಅಭದ್ರತೆ, ಅರಾಜಕತೆಯಿಂದ ಬೇಸತ್ತು ಜನತೆ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಭಾರೀ ದೊಡ್ಡ ಪ್ರಮಾಣದ ಭರವಸೆಯನ್ನು ಜನರಲ್ಲಿ ಮೂಡಿಸಿದೆ. ಇದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಜಯ ದಾಖಲಿಸಲು ಪೂರಕವಾಗಿದೆ ಎಂದು ರೈ ಭರವಸೆ ವ್ಯಕ್ತಪಡಿಸಿದರು.

ಕೆ.ಪಿ.ಸಿ.ಸಿ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಚೆಂಡ್ತಿಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಜಿಲ್ಲಾ ಕಾಂಗ್ರೆಸ್ ಮಾಜಿ ಕೋಶಾಧಿಕಾರಿ ವಿಜಯ ಕುಮಾರ್ ಸೊರಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಮುಖರಾದ ಬಿ.ಎಂ. ಅಬ್ಬಾಸ್ ಅಲಿ, ಶ್ರೀಧರ್ ರೈ ಕುರ್ಲೆತ್ತಿಮಾರು, ದೇರಣ್ಣ ಪೂಜಾರಿ, ಹಮೀದ್ ಕುಕ್ಕರಬೆಟ್ಟು, ನಿರಂಜನ್ ರೈ, ಪ್ರಕಾಶ್ ರೈ, ಅಬ್ಬಾಸ್ ನೇರಳಕಟ್ಟೆ, ಪದ್ಮನಾಭ ಶೆಟ್ಟಿ ಕೊಡಂಗೆಮಾರ್, ರಾಮಚಂದ್ರ ಶೆಟ್ಟಿ, ವಿಜಯ, ಸಮಿತಾ ಡಿ.ಪೂಜಾರಿ, ಪ್ರೇಮಾ, ಲಕ್ಷ್ಮೀ, ಹಾಜಿ ಕೆ. ಯೂಸುಫ್ ಕೊಡಾಜೆ, ನೀಲಯ್ಯ ಏಮಾಜೆ, ದರ್ಬಾರ್ ಅಬ್ದುಲ್ ಖಾದರ್, ಅಹ್ಮದ್ ಹಾಜಿ ಕುಕ್ಕರಬೆಟ್ಟು, ನಾರಾಯಣ ಗೌಡ, ಹಮೀದ್ ಪರ್ಲೊಟ್ಟು, ರಶೀದ್ ಪರ್ಲೊಟ್ಟು, ಬಿ.ಕೆ. ಬಂಗೇರ, ಎನ್.ಕೆ. ಅಬೂಬಕ್ಕರ್, ಪಿ.ಕೆ. ಅಬ್ಬಾಸ್ ಪರ್ಲೊಟ್ಟು, ಎನ್.ಕೆ. ಹಂಝ ಮತ್ತಿತರರು ಉಪಸ್ಥಿತರಿದ್ದರು.