ಬಡಜನರ ಬದುಕುವ ಹಕ್ಕನ್ನೇ ಕಸಿಯುತ್ತಿರುವ ಬಿಜೆಪಿ ಸರಕಾರ “ಉಳ್ಳವನೇ ಒಡೆಯ” ನೀತಿ ಅನುಸರಿಸುತ್ತಿದೆ- ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಬಿ.ಕೆ.ಹರಿಪ್ರಸಾದ್ ಟೀಕೆ

ಬಂಟ್ವಾಳ: ಕಾಂಗ್ರೇಸ್ ಪಕ್ಷ ಬಡವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದಲ್ಲದೆ ಉಳುವವನೇ ಒಡೆಯ ನೀತಿ ಮಾಡಿತ್ತು. ಆದರೆ ಬಿಜೆಪಿ ಬಡವರ ಬದುಕುವ ಹಕ್ಕನ್ನೂ ಕಸಿದು ಬಂಡವಾಳಶಾಹಿಗಳ ಜತೆ ನಿಂತು ಉಳ್ಳವನೇ ಒಡೆಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಕರಾವಳಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಶನಿವಾರ ಬೆಳಿಗ್ಗೆ ವಗ್ಗ ಕಾರಿಂಜ ಕ್ರಾಸ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಆಹಾರ, ವಸತಿ, ಉಡುಗೆ, ಆರೋಗ್ಯ, ಶಿಕ್ಷಣ ಜನರ ಮೂಲಭೂತ ಹಕ್ಕಾಗಿದ್ದು ಇದನ್ನು ಕೊಡುವಲ್ಲಿಯೂ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಜನರಿಗೆ ಜನಪರ ಕಾರ್ಯಕ್ರಮವೇ ಕೊಡಲಿಲ್ಲ. ಅದರಿಂದಾಗಿಯೇ ಅಭಿವೃದ್ಧಿ ಹೇಳಿ ಕೊಳ್ಳಲಾಗದೆ ಧರ್ಮಾಧಾರಿತ ರಾಜಕೀಯ ಮಾಡುತ್ತಿದೆ ಎಂದರು.

ಬ್ರಿಟಿಷರಿಗೆ ಕ್ಷಮಾಪತ್ರ ಬರೆದುಕೊಟ್ಟ ಸ್ವಾರಿ ಸಾವರ್ಕರ್ ಸಂತತಿಗಳು ನಾವಲ್ಲ. ಬ್ರಿಟಿಷರಿಗೇ ಮಂಡಿಯೂರದ ಗಾಂಧಿ-ನೆಹರು ಕುಟುಂಬದ ಗೌರವದ ಪಟಾಲಂ ಕಾಂಗ್ರೆಸ್. ಬಲ್ಕೀಸ್ ಬಾನು ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಕ್ಲೀನ್ ಚಿಟ್ ನೀಡಿದ ಗುಜರಾತ್ ಕೋರ್ಟಿನಿಂದ ಹೆಚ್ಚಿನ ನಿರೀಕ್ಷೆ ಏನೂ ಉಳಿದಿಲ್ಲ. ರಾಹುಲ್ ಗಾಂಧಿ ಭಾಷಣದ ಮಾತಿಗೆ ನಾವೂ ಬದ್ದರಾಗಿದ್ದೇವೆ. ನಮ್ಮನ್ನು ಅವರ ಜೊತೆ ಜೈಲಿಗೆ ಹಾಕಿ ಎಂದು ಹರಿಪ್ರಸಾದ್ ಸವಾಲು ಹಾಕಿದರು.

ಗಡೀಪಾರು ಆದವರಿಗೆ, ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಜೈಕಾರ, ಹೂ ಹಾರ ಹಾಕುವ ಮಂದಿ ಬಿಜೆಪಿಯಲ್ಲಿದ್ದಾರೆ. ಭ್ರಷ್ಟೋತ್ಸವ ಮಾಡುವ ಬಿಜೆಪಿಗರಿಗೆ ಕರ್ನಾಟಕದಲ್ಲಿ ಜನ ಯಾವತ್ತೂ ಸರಕಾರ ರಚಿಸುವ ಯೋಗ್ಯತೆ ನೀಡಿಲ್ಲ. ಪ್ರಾಣಿಗಳ ತರ ಎಂಎಲ್ಲೆಗಳನ್ನು ಖರೀದಿಸಿ ಸರಕಾರ ರಚಿಸಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಟೀಕಿಸಿದ ಹರಿಪ್ರಸಾದ್ ರಾಜಕೀಯವನ್ನು ರಾಜಕೀಯವಾಗಿ ಎದುರಿಸಲಾಗದ ಹಾಗೂ ಕನಿಷ್ಠ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೂ ಮುಖ ತೋರಿಸಲಾಗದ ಹೆದರುಪುಕ್ಕಲರು ದೇಶ ಆಳುತ್ತಿರುವುದು ದುರಂತ ಎಂದು ಗುಡುಗಿದರು. 

ಸರಕಾರ ಕಿತ್ತೊಗೆಯಲು ಜನ ನಿರ್ಧರಿಸಿ ಆಗಿದೆ-ರೋಜಿ ಎಂ.ಜಾನ್

40 ಪರ್ಸೆಂಟ್ ಸರಕಾರವನ್ನು ಕಿತ್ತೊಗೆಯಲು ಕರ್ನಾಟಕದ ಜನ ನಿರ್ಧರಿಸಿ ಆಗಿದೆ. ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತವಾಗಿದೆ. ಪ್ರತಿಯೊಂದು ಕೆಲಸಗಳಿಗೂ ಲಂಚ, ಪರ್ಸೆಂಟೇಜ್ ನೀಡಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಉಂಟಾಗಿದ್ದು, ಇಂತಹ ಕೆಟ್ಟ ಸರಕಾರವನ್ನು ಕೆಳಗಿಸುವ ತಾಕತ್ತು ಇರುವ ಏಕೈಕ ಪಕ್ಷ ಅದು ಕಾಂಗ್ರೆಸ್ ಮಾತ್ರ ಎಂದು ಎಐಸಿಸಿ ಕಾರ್ಯದರ್ಶಿ ರೋಜಿ ಎಂ ಜಾನ್ ಹೇಳಿದರು.

ಮೋದಿ ಸರಕಾರ ಬಂದು ಎರಡನೇ ಅವಧಿ ಕೂಡಾ ಮುಗಿಯುತ್ತಾ ಬಂದಿದ್ದು, ಇನ್ನೂ ಮೋದಿ ಹೇಳಿದ ಅಚ್ಚೇ ದಿನ್ ಬರಲಿಲ್ಲ. ಹದಿನೈದು ಲಕ್ಷವೂ ಇಲ್ಲ. ಕಪ್ಪು ಹಣವೂ ಇಲ್ಲ, ಪೆಟ್ರೋಲ್ ಡೀಸೆಲ್ ನೂರರ ಗಡಿ ದಾಟಿ ಆಗಿದೆ. ಇದೇನಾ ಅಚ್ಚೆ ದಿನ ಎಂದು ಪ್ರಶ್ನಿಸಿದ ಜಾನ್ ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ಬರಲಿದೆ ಎಂಬುದನ್ನು ಸ್ವತಃ ಬಿಜೆಪಿಗರೇ ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದ ಬದ್ದತೆ ಅರ್ಥ ಮಾಡಿಕೊಳ್ಳಲು ಗತ ಇತಿಹಾಸ ಅಧ್ಯಯನ ಮಾಡಬೇಕಾಗಿಲ್ಲ. ಕೇವಲ ಸಿದ್ದರಾಮಯ್ಯ ಯುಗವನ್ನೊಮ್ಮೆ ತಿರುಗಿ ನೋಡಿದರೆ ಸಾಕು ಎಂದು ನೆನಪಿಸಿದರು.

ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷಕ್ಕೆ ಚಿರ ಋಣಿಯಾಗಿದ್ದೇನೆ-ರೈ

ಇದೇ ವೇಳೆ ಮಾತನಾಡಿದ ಮಾಜಿ ಸಚಿವ, ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ, ಒಂಭತ್ತನೇ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷಕ್ಕೆ ಚಿರ ಋಣಿಯಾಗಿದ್ದೇನೆ. ಇದಕ್ಕೆ ಕಾರಣಕರ್ತರಾದ ಪಕ್ಷದ ಕಾರ್ಯಕರ್ತರು, ಮತದಾರರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಜನರ ಜೀವದ ಜೊತೆ ಚೆಲ್ಲಾಟ ಆಡಿ ಕಾಂಗ್ರೆಸ್ ಯಾವತ್ತೂ ಸೋಲು- ಲೆಕ್ಕಾಚಾರ ಮಾಡಿಲ್ಲ. ಚುನಾವಣೆ ಸೋಲು ಗೆಲುವಿನ ಜೊತೆಗೆ ಸಾಮಾಜಿಕ ಸಾಮರಸ್ಯ ಮುಖ್ಯ ಎಂಬುದನ್ನು ಕಾಂಗ್ರೆಸ್ ಮನಗಂಡು ರಾಜಕೀಯ ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು. 

ವಿಧಾನಪರಿಷತ್ ಸದಸ್ಯ, ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ತು ಸದಸ್ಯ ಡಾ. ಮಂಜುನಾಥ ಭಂಡಾರಿ ರಾಜ್ಯಸಭಾ ಮಾಜಿ ಸದಸ್ಯ ಬಿ ಇಬ್ರಾಹಿಂ ಮಾತನಾಡಿದರು.

ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಬಿ.ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಪಂಚಾಯತ್ ರಾಜ್ ಒಕ್ಕೂಟದ ದ ಕ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ್ ಪೂಜಾರಿ ಜೋರಾ, ಇಬ್ರಾಹಿಂ ನವಾಝ್ ಬಡಕಬೈಲು, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಹಿರಿಯ ನಾಯಕ ಜಿನರಾಜ ಅರಿಗ, ಸುದರ್ಶನ್ ಜೈನ್, ಸಂಪತ್ ಕುಮಾರ್ ಶೆಟ್ಟಿ, ಕಾವಳಮೂಡೂರು ಗ್ರಾ ಪಂ ಅಧ್ಯಕ್ಷೆ ರಜನಿ ಮೊದಲಾದವರಿದ್ದರು.

ಇದೇ ವೇಳೆ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಹಲವು ಮಂದಿ ಬಿಜೆಪಿ  ಎಸ್ ಡಿ ಪಿ ಐ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು.  ಚಂದ್ರಶೇಖರ ಕರ್ಣ ವಂದಿಸಿದರು.  ರಾಜೀವ್ ಶೆಟ್ಟಿ ಎಡ್ತೂರು ಹಾಗೂ ಜಗದೀಶ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318