ಕನಿಷ್ಠ ಸಾಗುವಳಿ ರೈತನಿಗೂ ಶೂನ್ಯ ಬಡ್ಡಿ ಬೆಳೆ ಸಾಲ ವಿತರಣೆ, ಕೇಂದ್ರದ ಯೋಜನೆ ಶ್ಲಾಘನೀಯ : ಪ್ರಭಾಕರ ಪ್ರಭು

ಸಿದ್ಧಕಟ್ಟೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರೈತರು ತಾವು ಹೊಂದಿರುವ ಸಾಗುವಳಿ ಮಿತಿಯ ಜಮೀನು ಕನಿಷ್ಠ 15 ಸೆಂಟ್ಸ್ ಇದ್ದರೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವಕಾಶ ಮಾಡಿ ಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದು ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.


ರೈತರು ತಮ್ಮ ಹೆಸರಿನಲ್ಲಿ ಕೇವಲ 15 ಸೆಂಟ್ಸ್ ಅಥವಾ ಮಿಗಿಲಾಗಿ ಸಾಗುವಳಿ ಜಮೀನು ಇದ್ದಲ್ಲಿ ತಮ್ಮ ಎಲ್ಲಾ ದಾಖಲೆಗಳೊಂದಿಗೆ ತಮ್ಮ ಗ್ರಾಮ ವ್ಯಾಪ್ತಿಯ ಹತ್ತಿರದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಅರ್ಜಿ ನೀಡಿ ಶೂನ್ಯ ಬಡ್ಡಿ ಬೆಳೆ ಸಾಲ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅವರು ಹೇಳಿದ್ದಾರೆ.
ಈ ಹಿಂದೆ ಕನಿಷ್ಠ ಸಾಗುವಳಿ ಮಿತಿಯು 25 ಸೆಂಟ್ಸ್ ಇದ್ದು 25 ಸೆಂಟ್ಸ್ ಕಡಿಮೆ ಸಾಗುವಳಿ ಜಮೀನು ಇರುವ ಅನೇಕ ಬಡ ರೈತರು ಶೂನ್ಯ ಬಡ್ಡಿ ಬೆಳೆ ಸಾಲ ಯೋಜನೆಯಿಂದ ವಂಚಿತರಾಗುತ್ತಿದ್ದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನೇಕ ಮಂದಿ ಅತೀ ಸಣ್ಣ ಬಡ ರೈತರಿಗೆ ಸರಕಾರದ ಅಕ್ರಮ -ಸಕ್ರಮ ಯೋಜನೆ, ಕುಟುಂಬ ವಿಭಾಗ ಪತ್ರ ಸೇರಿದಂತೆ ಇನ್ನಿತರ ಮೂಲಗಳಿಂದ 15 ಸೆಂಟ್ಸ್ ಅಥವಾ ಮೇಲ್ಪಟ್ಟು ಜಮೀನು ಹೊಂದಿರುವ ತುಂಡು ತುಂಡು ಹಿಡುವಳಿದಾರರಿಗೆ ಸಹ ಪಿ. ಎಮ್.ಕಿಸಾನ್ ಸಮ್ಮಾನ್ ಯೋಜನೆ ರೀತಿಯಲ್ಲಿಯೇ ಶೂನ್ಯ ಬಡ್ಡಿಯಲ್ಲಿ ಬೆಳೆ ಸಾಲ ವಿತರಣೆ ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ವಿಷಯ ತಿಳಿಸಿದ ಮೇರೆಗೆ ಸಚಿವರು ತಕ್ಷಣವೇ ಸ್ಪಂದಿಸುವ ಮೂಲಕ ಕೇಂದ್ರ ಸರಕಾರ ಮಟ್ಟದಲ್ಲಿ ಕನಿಷ್ಠ 15 ಸೆಂಟ್ಸ್ ನಿಂದ 25 ಸೆಂಟ್ಸ್ ಕನಿಷ್ಠ ಸಾಗುವಳಿ ಹೊಂದಿರುವ ಬಡ ರೈತರಿಗೂ ಅವರ ಕೃಷಿ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ವಿತರಣೆ ಮಾಡಲು ಎಲ್ಲಾ ಸಹಕಾರಿ ಸಂಘ ಗಳಿಗೆ ಆದೇಶ ಹೊರಡಿಸಲಾಗಿದೆ.
ಈ ರೀತಿಯಲ್ಲಿ ಕನಿಷ್ಠ ಸಾಗುವಳಿ ಜಮೀನು ಮಿತಿಯನ್ನು 15 ಸೆಂಟ್ಸ್ ನಿಂದ 25 ಸೆಂಟ್ಸ್ ಹೊಂದಿರುವ ರೈತರಿಗೂ ಶೂನ್ಯ ಬಡ್ಡಿ ಯಲ್ಲಿ ಬೆಳೆ ಸಾಲ ವಿತರಿಸಲು ಪ್ರಯತ್ನಸಿದ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಆದೇಶ ಹೊರಡಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ರೈತರ ಪರವಾಗಿ ಪ್ರಭಾಕರ ಪ್ರಭು ಕೃತಜ್ಞತೆ ಸಲ್ಲಿಸಿದ್ದಾರೆ.